ಕುಂದಾಪುರ, ಜ 04 : ಚಿರತೆ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿರುವ ಘಟನೆ ತೆಕ್ಕಟ್ಟೆ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊರನಾಡಿ ಎಂಬಲ್ಲಿ ನಡೆದಿದೆ.
ಲಚ್ಚಿ ಕುಲಾಲ್ ಹಾಗೂ ಗುಲಾಬಿ ಕುಲಾಲ್ ಎಂಬುವವರು ತಮ್ಮ ಹಸುಗಳನ್ನು ಮೇಯಲು ಬಿಟ್ಟಿದ್ದರು. ಆದರೆ ಹಸುಗಳು ಕೊಟ್ಟಿಗೆಗೆ ಹಿಂದಿರುಗಿ ಬಾರದ ಹಿನ್ನೆಲೆ ಹುಡುಕಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆಯಿಲ್ ತುಂಬಿದ್ದ ಟ್ಯಾಂಕರ್ ಫ್ಲೈಓವರ್ನ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿ – ಧಗಧಗಿಸಿದ ಬೆಂಕಿ
ಬಳಿಕ ಪರಿಶೀಲಿಸಿದಾಗ ಹಸುಗಳ ಮೇಲೆ ಚಿರತೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಮೊಳಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಮಾಜಿ ಅಧ್ಯಕ್ಷ ಉದಯ ಕುಲಾಲ್, ಪಶು ವೈದ್ಯ ಡಾ| ಜಯಣ್ಣ, ಅರಣ್ಯ ಇಲಾಖೆಯ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಗ್ರಾಮೀಣ ಭಾಗದ ಮೊಳಹಳ್ಳಿ, ಯಡಾಡಿ ಮತ್ಯಾಡಿ, ಶಾನಾಡಿ, ಕೊರ್ಗಿ ಸೇರಿದಂತೆ ಹಲವೆಡೆ ಚಿರತೆಗಳ ಓಡಾಟ ಹೆಚ್ಚಾಗಿದೆ. ಇನ್ನು ಈ ಘಟನೆಯ ಬಳಿಕ ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ.