![ಕಾಂತಾರ-1 ಚಿತ್ರದಲ್ಲಿ ನಟಿಸಲು ಹೊಸ ಕಲಾವಿದರಿಗಿದೆ ಅವಕಾಶ !](https://nimmondige24.com/wp-content/uploads/2023/12/117.jpg)
ಬೆಂಗಳೂರು: ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಮೊದಲ ಭಾಗದ (Kantara Movie) ಮುಹೂರ್ತ ನೆರವೇರಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ದಾಖಲೆಯ ವೀಕ್ಷಣೆ ಕಂಡಿದೆ. ಇದೀಗ ಚಿತ್ರತಂಡ ಕಲಾವಿದರ ಹುಡುಕಾಟದಲ್ಲಿ ತೊಡಗಿಕೊಂಡಿದೆ.
ಇದನ್ನೂ ಓದಿ: ಉಡುಪಿ: ವರ ಮತ್ತು ವಧು ಜೆಸಿಬಿ ಯಲ್ಲಿ ಮದುವೆ ಹಾಲ್ ಗೆ ಬಂದು ನವಜೋಡಿಗಳ ಕೋಳಿ ಅಂಕ ಪೈಟ್..!
ʼಕಾಂತಾರ ಅಧ್ಯಾಯ 1ʼ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣ ಪೇಜ್ನಲ್ಲಿ ಕಲಾವಿದರು ಬೇಕಾಗಿದ್ದಾರೆ ಎಂದು ಪೋಸ್ಟ್ ಹಂಚಿಕೊಂಡಿದೆ. ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಸಿನಿಮಾದಲ್ಲಿ ನಟಿಸಲು 30ರಿಂದ 60ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. 18ರಿಂದ 60 ವಯಸ್ಸಿನ ಮಹಿಳೆಯರೂ ಬೇಕಾಗಿದ್ದಾರೆ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ. ಆಸಕ್ತರು https://www.kantara.film/ ಈ ಲಿಂಕ್ ಒತ್ತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು. ರೀಲ್ಸ್ ಮತ್ತು ಅವುಗಳನ್ನು ಹೋಲುವ ಇತರ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಸ್ಪಷ್ಟವಾಗಿ ಹೇಳಿದೆ. ಡಿ. 14ರ ವರೆಗೆ ಅವಕಾಶ ಇದೆ.
ಫೆಬ್ರವರಿಯಿಂದ ʼಕಾಂತಾರ-1ʼ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ವರದಿಗಳ ಪ್ರಕಾರ ಈ ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಇತಿಹಾಸ ಸೃಷ್ಟಿಸಿದ್ದ ʼಕಾಂತಾರʼ
ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿತ್ತು. ಅದು ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿ ಸಾರ್ವಕಾಲಿಕ ಕಲೆಕ್ಷನ್ ಮಾಡಿದ ಕನ್ನಡದ ಎರಡನೇ ಚಿತ್ರವಾಗಿ ಹೊರಹೊಮ್ಮಿತ್ತು. ಇದೀಗ ಈ ಚಿತ್ರದ ಪ್ರೀಕ್ವೆಲ್ ಆಗಿ ʼಕಾಂತಾರ -1ʼ ತೆರೆಗೆ ಬರಲಿದೆ. ಅಂದರೆ ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 27ರಂದು ರಿಲೀಸ್ ಆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ದಾಖಲೆಯ ವೀಕ್ಷಣೆ ಕಂಡಿದೆ. ಏಳು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಟೀಸರ್ ಬರೋಬ್ಬರಿ 12 ಮಿಲಿಯನ್(1.2 ಕೋಟಿ)ಗಿಂತ ಅಧಿಕ ಭಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಹಲವು ದಾಖಲೆಗಳನ್ನು ಇದು ಸರಿಗಟ್ಟಿದೆ. ನವೆಂಬರ್ 27ರಂದು ಕುಂದಾಪುರ ಆನೆಗುಡ್ಡೆ ದೇವಾಲಯದಲ್ಲಿ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿದೆ. ಜತೆಗೆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ಈ ಬಾರಿ ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ.
ʼʼಹೊಸ ಪ್ರತಿಭೆಗಳನ್ನು ಹುಡುಕುತ್ತಾ ಇದ್ದೇವೆ. ನಿರ್ಮಾಪಕ ವಿಜಯ್ ಅವರ ನಂಬಿಕೆ ಸಕ್ಸೆಸ್ಗೆ ಸಾಥ್ ಕೊಟ್ಟಿದೆ. ಕಥೆಗೆ ಏನು ಬೇಕೋ ಅವರು ಸಹಾಯ ಮಾಡುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಲಾವಿದರಲ್ಲಿ ಸ್ವಲ್ಪ ಜನ ಹೊಸಬರು ಬರುತ್ತಾರೆʼʼ ಎಂದು ಚಿತ್ರದ ಮುಹೂರ್ತ ಸಮಯದಲ್ಲೇ ರಿಷಬ್ ಶೆಟ್ಟಿ ಹೇಳಿದ್ದರು. ಅದರಂತೆ ಈಗ ಹೊಸಬರ ಆಡಿಷನ್ಗೆ ಕರೆ ನೀಡಲಾಗಿದೆ. ನಾಯಕನಾಗಿ ರಿಷಬ್ ಶೆಟ್ಟಿ ಮುಂದುವರಿಯಲಿದ್ದಾರೆ.
WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ